ಅಪರಾ / ಅಚಲ ಏಕಾದಶಿ ಮಹತ್ವ

ಅಪರಾ / ಅಚಲ ಏಕಾದಶಿ

ವೈಶಾಖ ಮಾಸದ ಕೃಷ್ಣಪಕ್ಷದ ಏಕಾದಶಿಯನ್ನು ಅಪರಾ ಅಥವಾ ಅಚಲ ಏಕಾದಶಿ ಎನ್ನುವರು. ಈ ಕುರಿತು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖವಾಗಿದೆ. ಅಂದು ಭಗವಂತನ ತ್ರಿವಿಕ್ರಮ ರೂಪವನ್ನು ಪೂಜೆ ಮಾಡಬೇಕು. ಶ್ರೀವಿಷ್ಣುಸಹಸ್ರನಾಮ ಮೊದಲಾದ ಸ್ತೋತ್ರ ಮಂತ್ರಗಳಿಂದ ಅರ್ಚಿಸಬೇಕು.ಅಪಾರ ಧನಸಂಪತ್ತು, ಆಯುಷ್ಯ, ಕೀರ್ತಿ ಹಾಗೂ ಸಂತೋಷವನ್ನು ಕೊಡುವಂಥ ಈ ವ್ರತ ಅತ್ಯಂತ ಶ್ರೇಷ್ಠವಾಗಿದೆ.

ಮಹಾರಾಷ್ಟ್ರದಲ್ಲಿ ಇದಕ್ಕೆ ವೈಶಾಖ ವಾಡಿ ಏಕಾದಶಿ ಎಂದು ಕರೆಯುತ್ತಾರೆ. ಅಲ್ಲಿ ಶ್ರೀವಿಷ್ಣುವಿನ ವಾಮನಾವತಾರಕ್ಕೆ ಪೂಜೆ ಮಾಡುವರು. ಪಂಜಾಬ, ಹರ್ಯಾಣ ಮತ್ತು ಕಾಶ್ಮೀರದಲ್ಲಿ ಇದಕ್ಕೆ ಭದ್ರಕಾಳಿ ಏಕಾದಶಿ ಎನ್ನುವರು. ಭದ್ರಕಾಳಿ ಜಯಂತಿಯನ್ನು ಆಚರಿಸಿ ದೇವಿಗೆ ಪೂಜೆ ಸಲ್ಲಿಸಿ ಉಪವಾಸ ಆಚರಿಸುತ್ತಾರೆ.
ಓರಿಸ್ಸಾದಲ್ಲಿ ಜಲಕ್ರೀಡಾ ಏಕಾದಶಿ ಎನ್ನುವರು. ಅಂದು ಪುರಿ ಜಗನ್ನಾಥನಿಗೆ ಅರ್ಚನೆ ಮಾಡಿ ಇಷ್ಟಾರ್ಥ ಪೂರೈಸುವಂತೆ ಪ್ರಾರ್ಥಿಸುವರು.

ದೃಷ್ಟಾಂತ:

ಹಿಂದೆ ಧರ್ಮನಿಷ್ಠನಾದ ಮಹಿಧ್ವಜನೆಂಬ ರಾಜನಿದ್ದ. ಆತನಿಗೆ ವಜ್ರಧ್ವಜನೆಂಬ ದುಷ್ಟ, ವಂಚಕನೆನಿಸಿದ ತಮ್ಮನಿದ್ದ. ವಜ್ರಧ್ವಜನಿಗೆ ಅಣ್ಣ ಮಹಿಧ್ವಜನನ್ನು ಕಂಡರೆ ಆಗುತ್ತಿರಲಿಲ್ಲ. ಹೀಗಾಗಿ ಆತ ಅಣ್ಣನನ್ನು ಕೊಂದು ಒಂದು ಅಶ್ವಥ್ಥ ಮರದ ಕೆಳಗೆ ಸುಟ್ಟುಹಾಕಿದ. ಈ ರೀತಿಯ ಕೆಟ್ಟಸಾವು ಪಡೆದ ಮಹಿಧ್ವಜ ಪಶಾಚಿಯಾದ. ಅದೇ ಗಿಡದ ಮೇಲೆ ಕುಳಿತು ಜನರಿಗೆ ತೊಂದರೆ ಕೊಡುಲು ಆರಂಭಿಸಿದ.

  ನೀಲಕೋಡು ಗ್ರಾಮದ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯ

ಒಮ್ಮೆ ಆ ಮಾರ್ಗವಾಗಿ ಧುಮ್ರ ಎಂಬ ಋಷಿಗಳು ಹೋಗುತ್ತಿದ್ದರು. ಅವರಿಗೆ ಆ ಪಿಶಾಚಿ ಯಾರೆಂದು, ಅದಕ್ಕೆ ಈ ಗತಿ ಯಾಕೆ ಬಂದಿದೆ ಎಂಬುದು ತಮ್ಮ ತಪ:ಶಕ್ತಿಯಿಂದ ತಿಳಿಯಿತು. ಅವರು ತಾವೇ ಅಪರಾ ಏಕಾದಶಿ ವ್ರತ ಆಚರಿಸಿ ದ್ವಾದಶಿಯಂದು ಆ ವ್ರತದ ಪುಣ್ಯವನ್ನು ಪಿಶಾಚಿಯಾಗಿದ್ದ ಮಹಿಧ್ವಜನಿಗೆ ಧಾರೆ ಎರೆದರು. ಮಹಿಧ್ವಜ ಪಿಶಾಚ ರೂಪದಿಂದ ಮುಕ್ತಿಹೊಂದಿದ.

ಈ ವ್ರತದ ಆಚರಣೆಯಿಂದ ಬ್ರಹ್ಮಹತ್ಯಾ ದೋಷ, ಭೂತಬಾಧೆ, ದುಷ್ಟಯೋನಿಯಲ್ಲಿ ಜನನ, ಪರನಿಂದೆ ಇತ್ಯಾದಿ ಪಾಪಗಳಿಂದ ಮುಕ್ತಿ ದೊರೆಯುತ್ತದೆ.
ಪರಸ್ತ್ರೀ ಮೋಹದಿಂದ, ಸುಳ್ಳುಸಾಕ್ಷಿ ಯಿಂದ, ಮೋಸಮಾಡಿದ್ದರಿಂದ, ಸುಳ್ಳು ಹೇಳಿದ್ದರಿಂಧ, ಅನ್ಯಥಾ ವಾದದಿಂದ, ಅಭಕ್ಷ ಭಕ್ಷಣದಿಂದ ಅಲ್ಲದೇ ಅನೇಕ ಪಾಪಕರ್ಮಗಳವಶಾತ್ ಪರಿತಪಿಸುತ್ತಿರುವವರು ಈ ವ್ರತಾಚರಣೆಯಿಂದ ಪಾಪಮುಕ್ತಿ ಪಡೆಯುತ್ತಾರೆ. ಯುದ್ಧದಿಂದ ಓಡಿಹೋದ ಕ್ಷತ್ರೀಯ, ಗುರುವಿಗೆ ದ್ರೋಹಬಗೆದ ಶಿಷ್ಯನಿಗೆ ನರಕವೇ ಗತಿ ಆದರೆ ಅಪರಾ ಏಕಾದಶಿ ವ್ರತ ಆಚರಿಸಿದರೆ ಪ್ರಾಯಶ್ಚಿತ್ತವಾಗುತ್ತದೆ.

  ಗರುಡ ಅಷ್ಟೋತ್ತರ ಶತನಾಮ ಸ್ತೋತ್ರಂ

ಈ ವ್ರತಾಚರಣೆಯಿಂದ ಪುಷ್ಕರ ಕ್ಷೇತ್ರದಲ್ಲಿ ಮೂರುಬಾರಿ ಸ್ನಾನದ ಫಲ, ಗಂಗೆಯಲ್ಲಿ ಮಿಂದು ಪಿಂಡಪ್ರದಾನ ಮಾಡಿದ ಪುಣ್ಯ ಲಭಿಸುತ್ತದೆ.ಸೂರ್ಯ ಮಕರದಲ್ಲಿದ್ದಾಗ ಪ್ರಯಾಗದಲ್ಲಿ ಮಾಘ ಸ್ನಾನ ಮಾಡಿದ ಫಲ, ಶಿವರಾತ್ರಿ ವ್ರತಾಚರಣೆ ಫಲ, ಗುರು ಸಿಂಹದಲ್ಲಿದ್ದಾಗ ಗೋದಾವರಿ ನದಿ ಸ್ನಾನದ ಫಲ, ಕುಂಭದಲ್ಲಿದ್ದಾಗ ಬದರಿ-ಕೇದಾರ ಯಾತ್ರೆಯ ಫಲ, ಸೂರ್ಯಗ್ರಹಣ ಕಾಲದಲ್ಲಿ ಕುರುಕ್ಷೇತ್ರದಲ್ಲಿ ಸ್ನಾನ ಮಾಡಿದ ಫಲ ದೊರೆಯುತ್ತದೆ, ಸ್ವರ್ಣ, ಆನೆ, ಕುದುರೆ, ಇಲ್ಲವೆ ಕರುವಿನೊಂದಿಗೆ ಹಸುವನ್ನು ಭೂಮಿ, ಬಂಗಾರ ಸಹಿತ ದಾನ ಮಾಡಿದ ಫಲ ಈ ವ್ರತದಿಂದ ದೊರೆಯುತ್ತದೆ.

  ಆಧ್ಯಾತ್ಮಿಕ ತೊಂದರೆಗಳು ಎಂದರೇನು? ಲಕ್ಷಣಗಳು ?

ಇದು ಪಾಪವೆಂಬ ವೃಕ್ಷವನ್ನು ಕಡಿಯುವಂಥ ಕೊಡಲಿಯಾಗಿದೆ. ಪಾಪವೆಂಬ ದಟ್ಟಡವಿಯನ್ನು ಸುಡುವಿ ಅಗ್ನಿಎನಿಸಿದೆ. ಮನುಷ್ಯನ ಪಾಪವೆಂಬ ಅಂಧಕಾರವನ್ನು ಅಳಿಸುವ ಸೂರ್ಯನ ಬೆಳಕಾಗಿದೆ. ಇದನ್ನು ಆಚರಿಸಿದವರು ಎಲ್ಲ ಪಾಪಗಳಿಂದ ಮುಕ್ತಿಪಡೆದು ವಿಷ್ಣುಲೋಕ ಪಡೆಯುತ್ತಾರೆ.

ಈ ವ್ರತದ ಮಹಿಮೆಯನ್ನು ಲೋಕಹಿತಕ್ಕಾಗಿ ಶ್ರೀಕೃಷ್ಣ ನೆಪಮಾತ್ರಕ್ಕೆ ಧರ್ಮರಾಜನಿಗೆ ಹೇಳಿರುವನು. ಇದನ್ನು ಓದಿದರೂ, ಕೇಳಿದರೂ ಎಲ್ಲ ಪಾಪದಿಂದ ಮುಕ್ತಿ ಸಿಗುವುದು ಇದಕ್ಕೆ ಸಂದೇಹ ಬೇಡ.

ಶ್ರೀಕೃಷ್ಣಾರ್ಪಣಮಸ್ತು

🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

ಮೂಲ : ಶ್ರೀಮತಿ ಪ್ರೇಮಾ ಅಚ್ಯುತರಾವ ಕುಲಕರ್ಣ. ಹುಬ್ಬಳ್ಳಿ.

Leave a Reply

Your email address will not be published. Required fields are marked *

Translate »